ಶುಕ್ರವಾರ, ಆಗಸ್ಟ್ 28, 2009

"ಭಗತ್ ಸಿಂಗ್ ಅಂಕ ಕೊಡಿ ಎಂದಿದ್ದ,ನೀಟಾಗಿ ಫೇಲಾಗು ಅಂದಿದ್ದೆ!"



“ಬ್ರಿಟಿಷರು ನಮ್ಮ ಮೇಲೆ ದೌರ್ಜನ್ಯ ಮಾಡಿದ್ದರೂ ದಕ್ಷತೆಯಿಂದ ಆಳಿ,ಕಟ್ಟು ನಿಟ್ಟಿನ ಕಾನೂನು ಮೂಲಕ ರಾಜ್ಯಭಾರ ಮಾಡುತ್ತಿದ್ದರು.ಆಗ ಕಾನೂನನ್ನು ಯಾರೂ ಮೀರುತ್ತಿರಲಿಲ್ಲ.ಆದರೆ ನಮ್ಮದೇ ಆಡಳಿತ ವ್ಯವಸ್ಥೆ ಬಂದ ಮೇಲೆ ಎಲ್ಲರಿಗೂ ಅವರದ್ದೇ ಆದ ಕಾನೂನು ಆಗಿ ಸ್ವಾತಂತ್ರ್ಯ ಎಂಬುದು ಭೋಗ ವಸ್ತುವಾಗಿ ಬಿಟ್ಟಿದೆ”.
ಈ ಮಾತನ್ನು ಪಂಡಿತ ಸುಧಾಕರ ಚತುರ್ವೇದೀ ಹೇಳುವಾಗ ಮನಸ್ಸಿನಲ್ಲಿ ಆಡಳಿತ ವ್ಯವಸ್ಥೆ ಬಗ್ಗೆ ಅಸಮಾಧಾನವಿತ್ತು..೨೧ ಬಾರಿ ಭಾರತ ದೇಶವನ್ನು ಸುತ್ತಿದ ಅನುಭವಿ ಇವರು.
೧೮೯೭ರಲ್ಲಿ ಬೆಂಗಳೂರಿನ ಬಳೆಪೇಟೆಯಲ್ಲಿ ಜನಿಸಿದ ಇವರು ಅಪ್ಪಟ ಕನ್ನಡಿಗ. ೧೩ ನೇ ವಯಸ್ಸಿನಲ್ಲಿ ಉತ್ತರ ಭಾರತದ ಪ್ರಸಿದ್ಧ ಕಾಂಗಡಿ ಗುರುಕುಲಕ್ಕೆ ಸೇರಿ ನಾಲ್ಕು ವೇದಗಳ ಅಧ್ಯಯನ ಮಾಡಿ ನಿಜವಾದ ಅರ್ಥದಲ್ಲಿ “ಚತುರ್ವೇದೀ” ಆಗಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮಕಲು ಪ್ರೇರಣೇಯಾಗಿದ್ದೇ ಈ ವೇದಗಳಿಂದ.
ಮಹಾತ್ಮ ಗಾಂಧಿಯವರೊಂದಿಗಿನ ಒಡನಾಟ,ಇಂದಿನ ರಾಜಕೀಯ ಬೆಳವಣಿಗೆ,ಸ್ವಾತಂತ್ರ್ಯ ಹೋರಾಟದ ತಮ್ಮ ಅನುಭವಗಳನ್ನು ತೆರೆದಿಟ್ಟಿದ್ದಾರೆ.
ಮಾತಿನ ವಿವರ
ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಮೊದಲು ಸಹ ಈಗಿನಂತೆ ಪುಂಡು-ಪೋಕರಿಗಳಿದ್ದರು.ಆದರೆ ನೆಹರು,ಸರ್ದಾರ್ ವಲ್ಲಭಾಯಿ ಪಟೇಲ್ ಮುಂತಾದವರ ಎದುರು ಅದು ಮರೆಯಾಗಿ ಮೇಲೆ ಬರಲು ಆಗಲಿಲ್ಲ.ಈಗಿರುವಂತೆ ಪುಂಡರ ರಾಜ್ಯ ಅಥವಾ ಬಡಿದು ತಿನ್ನುವ ಕಾಲವಂತೂ ಆಗಿರಲಿಲ್ಲ.

ಸಾವಿರ ಹೆಣಗಳ ಅಂತ್ಯಸಂಸ್ಕಾರ:
೧೯೧೯ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ನೆನೆಸಿಕೊಂದರೆ ಈಗಲೂ ಕಣ್ಣಲ್ಲಿ ನೀರು ಬರುತ್ತದೆ. ದೊಡ್ಡದಾದ ತೋಟದಂತಿದ್ದ (ಕೋಟೆ) ಅಲ್ಲಿ ೩-೪ ಅಂತಸ್ಥಿನ ಎತ್ತರದ ಗೋಡೆ ಸುತ್ತಲು ಇದ್ದರೆ ಒಂದೇ ಒಂದು ಬಾಗಿಲು.೧೦ಸಾವಿರಕ್ಕೂ ಹೆಚ್ಚು ಜನ ಸೇರುವಂತ ಜಾಗ.ಎಂಟು ಸಾವಿರ ಜನ ಆದರೂ ಸೇರಿದ್ದರು. ನೋಡುತ್ತಿದ್ದಂತೆ ಎಲ್ಲರ ಮೇಲೂ ಗುಂಡಿನ ದಾಳಿ.ಆ ಘಟನೆಯಲ್ಲಿ ಸಾವಿರಕ್ಕೂ ಹೆಚ್ಚುಜನ ಸತ್ತಿದ್ದರು. ಆದರೆ ಅಂದಿನ ಬ್ರಿಟಿಷ್ ಸರಕಾರ ಕೇವಲ ೬೭೦ ಜನ ಮಾತ್ರ ಸತ್ತಿದ್ದಾರೆ ಎಂದು ಹೇಳುತ್ತಿದ್ದರು.ಮಂತ್ರ ಬರುತ್ತಿದ್ದರಿಂದ ಗಾಂಧಿಜಿಯವರು ನನ್ನ ಬಳಿ ಅಂತ್ಯ ಸಂಸ್ಕಾರ ಮಾಡಲು ಹೇಳಿದರು.


ಭಗತ್ ಸಿಂಗ್ ಅಂಕ್ ಕೊಡಿ ಎಂದು ಕೇಳಿದ್ದ:
ಲಾಹೋರ್ ನಲ್ಲಿ ನಾನಿದ್ದಾಗ ಭಗತ್ ನನ್ನ ವಿಧ್ಯಾರ್ಥಿ.ಗಣಿತದಲ್ಲಿ ಪಾಸಾಗಲು ೧೫ ಅಂಕ ಬೇಕಿತ್ತು.ನನ್ನ ಹತ್ತೀರ ಅಂಕ ಕೊಡುವಂತೆ ಹೇಳಿದಾಗ ಲಕ್ಷಣವಾಗಿ ಫೇಲಾಗು ಎಂದು ಹೇಳಿದ್ದೆ. ನನ್ನ ಕೈಯಲ್ಲಿ ಇಂಥ ಕೆಲಸ ಅಸಾಧ್ಯ ಎಂದಿದ್ದೆ.ಆ ಮೇಲೆ ಸ್ವಾತಂತ್ರ್ಯಹೋರಾಟಕ್ಕೆ ಸೇರಿದ.ಭಗತ್ ಸಿಂಗ್,ಸುಖದೇವ್ ಮತ್ತೀತರರು ಕ್ರಾಂತಿಕಾರಿ ಮೂಲಕ ಸ್ವಾತಂತ್ರ್ಯ ಪಡೆಯಲು ಪ್ರಯತ್ನ ಪಟ್ಟರೂ ಗಾಂಧಿ ಮತ್ತು ಅವರ ನಡುವೆ ಯಾವುದೇ ಬಿನಾಭಿಪ್ರಾಯವಿರಲಿಲ್ಲ.
ಬದಲಾವಣೆ ಪ್ರಪಂಚದ್ದು:
ಸ್ವಾತಂತ್ರ್ಯ ಸಿಕ್ಕಿದಕ್ಕೇ ಇಷ್ಟೆಲ್ಲಾ ಬದಲಾವಣೆ ಆಗಿದ್ದಲ್ಲ.ನಮ್ಮನ್ನಾಳುವವರು ಸರಿ ಇದ್ದರೆ ಇನ್ನೂ ಸಾಕಷ್ಟು ಅಭಿವೃದ್ಧಿಯಾಗಬಹುದಿತ್ತು.ಈಗ ಕೇವಲ ಸ್ವಾತಂತ್ರ್ಯದಿಂದ ೨-೩ ಶೇಕಡ ಅಭಿವೃದ್ಧಿಯಾಗಿರಬಹುದು.ಉಳಿದಿದ್ದು ಜಗತ್ತಿನಂತೆ ಮುಂದುವರೆಯುತ್ತಿದೆ ವಿನ: ನಮ್ಮಿಂದಲೇ ಆಗಿದ್ದಲ್ಲ.ಇಂದಿನ ಅಧಿಕಾರದಲ್ಲಿ ಆತ್ಮವಿಲ್ಲ.ಕೇವಲ ಶರೀರ ಮಾತ್ರ ಆಳುತ್ತಿದೆ.

ಗಾಂಧಿ ಒಡನಾಟ:
೧೯೧೫ರಲ್ಲಿ ಗುರುಕುಲಕ್ಕೆ ಗಾಂಧಿ ಬಂದಾಗ ಮೊದಲ ಪರಿಚಯವಾಯಿತು.ನನ್ನ ಹಿಂದಿಯ ಚುರುಕು ನೋಡಿ ಕರ್ನಾಟಕಿಯದವನ ಅಂದಿದ್ದರು.೧೯೧೭-೧೮ರಲ್ಲಿ ಕುಂಭಮೇಳದಲ್ಲಿ ಬ್ರಾಹ್ಮಣರು ಗಾಂಧಿ ಬಳಿ ಜುಟ್ಟು ಏಕೆ ಬಿಟ್ಟಿಲ್ಲ ಕೇಳಿದಾಗ ಬಿಡುವೆ ಎಂದಿದ್ದರು.ಜನಿವಾರ ಇಲ್ಲದಾಗ ಅದಿಲ್ಲದೆ ಎಷ್ಟೋ ಹಿಂದೂಗಳಿಲ್ಲವೇ ಎಂದಿದ್ದರು.ನನಗು ಅವರಿಗು ಜಗಳವೇ ಆಯ್ತು.


ಕಿವಿಮಾತು:
ಹಿರಿಯರು ಕಷ್ಟಪಟ್ಟು ಸ್ವಾತಂತ್ರ್ಯಗಳಿಸಿಕೊಟ್ಟಿದ್ದು ಸ್ವಚ್ಚಂದಕ್ಕಾಗಿ ಅಲ್ಲ.ಇದನ್ನು ಕಿರಿಯರು ಪ್ರಜೆಗಳು ಗಮನಿಸಬೇಕು. ಸ್ವಾತಂತ್ರ್ಯವನ್ನು ಅಭಿವೃದ್ಧಿಗೆ ಬಳಸುವುದರ ಜೊತೆ, ಕಿರಿಯರಿಗೆ,ಸ್ವಾತಂತ್ರ್ಯದ ಮಹತ್ವವನ್ನು ತಿಳಿಸುವ ಕಾರ್ಯ ಆಗಬೇಕಾಗಿದೆ.ಇಲ್ಲದಿದ್ದರೆ ಕೇಲವೇ ವರ್ಷಗಳಲ್ಲಿ “ಸ್ವಾತಂತ್ರ್ಯ” ಪದ ಮರೆಯಾಗಿ ಬಿಡುವ ಭಯವಿದೆ. ಇಲ್ಲದಿದ್ದರೆ ಸ್ವಾತಂತ್ರ್ಯ ಬಂದು ಎಷ್ಟೇ ವರ್ಷ ಆದರೂ ಹೀಗೆ ಇರುವುದರಲ್ಲಿ ಸಂಶಯವಿಲ್ಲ. ನೈತಿಕತೆ ಮೂಡಿ ಒಳ್ಳೆಯ ಅಭಿವೃದ್ಧಿ ದೇಶ ನಿರ್ಮಿಸಲು ಎಲ್ಲರೂ ಪಣತೊಡಬೇಕು.